ಕರ್ನಾಟಕದಾದ್ಯಂತ ಸತತ ಮೂರು ತಿಂಗಳಿಂದ ಇಂಪಾದ ಗಾಯನದಿಂದ ಜನರ ಮನಸೂರೆಗೊಂಡಿದ್ದ ಸರೆಗಮಪ ಲಿಟಲ್ ಚಾಂಪ್ಸ್ ಸೀಸನ್ ೧೦ರ ವಿಜೇತರು ಯಾರೆಂದು ಸೋಮವಾರ ಸಂಜೆ ನಿರ್ಣಯವಾಯಿತು.
೧೫ ಸಾವಿರಕ್ಕೂ ಹೆಚ್ಚಿನ ಜನರು ಮಳೆ ಚಳಿಯನ್ನು ಲೆಕ್ಕಿಸದೆ ತಮ್ಮ ನೆಚ್ಚಿನ ಲಿಟಲ್ ಚಾಂಪ್ಸ್ಗೆ ಬೆಂಬಲ ವ್ಯಕ್ತಪಡಿಸಿದರು. ಅಂಕಿತ, ನಿಹಾರಿಕ, ಸುಪ್ರಿಯಾ ಜೋಷಿ, ಅಭಿನವ್ ಹಾಗೂ ಗಣೇಶ್ ಗ್ರಾಂಡ್ ಫಿನಾಲೆ ಹಂತವನ್ನು ತಲುಪಿದ್ದರು. ಈ ೫ ಅದ್ಭುತ ಕಂಠಗಳ ಸಂಗೀತ ಸಮರದಲ್ಲಿ ಯಾರು ಗೆಲ್ಲುತ್ತಾರೆಂದು ಎಲ್ಲರಲ್ಲೂ ಕುತೂಹಲ ಮನೆ ಮಾಡಿತ್ತು.
ಸರೆಗಮಪ ಗ್ರಾಂಡ್ ಫಿನಾಲೆಯಲ್ಲಿ ಎಂದಿನಂತೆ, ಶೋನ ತೀರ್ಪುಗಾರರಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಉಪಸ್ಥಿತರಿದ್ದರು. ಫಿನಾಲೆಯ ರಂಗನ್ನು ಇಮ್ಮಡಿಗೊಳಿಸಲು ನಾದಬ್ರಹ್ಮ ಹಂಸಲೇಖ ವಿಶೇಷ ಆಹ್ವಾನಿತರಾಗಿ ಬಂದು ವಿಜೇತರ ಹೆಸರನ್ನು ಘೋಷಿಸಿದರು.
ಫಿನಾಲೆಯ ದಿನ, ಅನುಶ್ರೀ ಅವರ ಬಿಂದಾಸ್ ಡ್ಯಾನ್ಸ್ ಪರ್ಫಾರ್ಮೆನ್ಸ್, ಎಲಿಮಿನೇಟ್ ಆದ ಎಲ್ಲ ಮಕ್ಕಳ ಜುಗಲ್ ಬಂದಿ ಪರ್ಫಾರ್ಮೆನ್ಸ್, ತರಲೆ ತಮಾಷೆಗಳ ಜೊತೆ, ಫೈನಾಲಿಸ್ಟ್ ಗಳ ರೋಮಾಂಚನ ಗಾಯನ ನೆರೆದ ಜನಸ್ತೋಮಕ್ಕೆ ಅದ್ವಿತೀಯ ಮನರಂಜನೆಯನ್ನು ಉಣಬಡಿಸಿತು.
೫ ಜನರ ಗ್ರಾಂಡ್ ಫಿನಾಲೆ, ಕೊನೆಯ ಹಂತದಲ್ಲಿ ೩ ಜನಕ್ಕೆ ಇಳಿಯಿತು. ಭಾರಿ ಆತಂಕ, ಕುತೂಹಲ, ಭಾವಪೂರ್ಣ ಕ್ಷಣಗಳ ನಂತರ, ವಿಜೇತರ ಕೈಯನ್ನು ಹಂಸಲೇಖ ಮೇಲೆತ್ತುತ್ತಿದ್ದಂತೆ ವರ್ಣರಂಜಿತ ವೇದಿಕೆಯ ಮೇಲೆ ಮಾಯಾಲೋಕವೇ ಸೃಷ್ಟಿಯಾಯಿತು. ವಿಜೇತರಿಗೆ ೫ ಲಕ್ಷ ಬಹುಮಾನ ಹಾಗೂ ರನ್ನರ್ ಅಪ್ ಗೆ ೨.೫ಲಕ್ಷ ಬಹುಮಾನ ಘೋಷಣೆಯಾಯಿತು. ಇಡೀ ಕಾರ್ಯಕ್ರಮವನ್ನು ಇದೇ ವಾರಾಂತ್ಯ, ಡಿಸೆಂಬರ್ ೨೦, ಭಾನುವಾರ ಸಂಜೆ ೬ ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.